ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ ಪರಿಚಯ

ಪಾಲ್ತಾಡಿ ರಾಮಕೃಷ್ಣ ಆಚಾರ್ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ಇವರು ತುಳುನಾಡಿನ ಓರ್ವ ಹಿರಿಯ ಸಾಹಿತಿ, ಹಿರಿಯ ಜಾನಪದ ವಿದ್ವಾಂಸರೂ ಹೌದು. ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಪಾಲ್ತಾಡಿ ರಾಮಕೃಷ್ಣ ಆಚಾರ್ ರವರು ಗುರುತಿಸಿಕೊಂಡವರು. ವಿಶೇಷವಾಗಿ ಕಾವ್ಯ, ನಾಟಕ, ಸಣ್ಣಕತೆ, ಸಂಶೋಧನೆ, ವಿಮರ್ಶೆ ಮತ್ತು ಜಾನಪದ ಕ್ಷೇತ್ರದಲ್ಲಿ ಕೆಲಸ ಮಾಡಿದವರು. 

ಪಾಲ್ತಾಡಿ ಅವರ ಬಾಲ್ಯ 

ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರು ಹುಟ್ಟಿದ್ದು ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಪೆಲತ್ತಾಜೆಯಲ್ಲಿ. ಇಲ್ಲಿ ವಾಸವಿದ್ದದ್ದು ಬೀಡಿನ ಬಲ್ಲಾಳರ ಒಕ್ಕಲಿಗರಾಗಿ. ಇವರದ್ದು ಆಗ ಅವಿಭಕ್ತ ಕುಟುಂಬ. ಪಾಲ್ತಾಡಿಯಲ್ಲಿ ರಾಮಕೃಷ್ಣ ಆಚಾರ್ ಅವರ ಅಜ್ಜನ ಸ್ವಂತ ಮನೆಯಾಗಿತ್ತು. ಅಜ್ಜನ ಏಕೈಕ ಪುತ್ರಿ ಅಂದರೆ ಅವರ ತಾಯಿ ತೀರಿಹೋದ ಬಳಿಕ ಪಾಲ್ತಾಡಿಯ ಮನೆ ಇವರ ಹೆಸರಿಗಾಯಿತು. ಹಾಗಾಗಿ ಅವರ ಹೆಸರಿನಲ್ಲಿ ‘ಪಿ’ ಎಂದು ಬಳಸಿಕೊಂಡಿದ್ದ ಸಂಕೇತಾಕ್ಷರವನ್ನು ಪೆಲತ್ತಾಜೆ ಎಂಬುದನ್ನು  ಪಾಲ್ತಾಡಿ ಎಂದು ಮಾಡಿಕೊಂಡರು.

ಪಾಲ್ತಾಡಿ ಅವರ ಶೈಕ್ಷಣಿಕ ಜೀವನ 

ಪಾಲ್ತಾಡಿ ರಾಮಕೃಷ್ಣ ಆಚಾರ್ ರವರು ಬೆಟ್ಟಂಪಾಡಿ ಹಾಗೂ ಪಾಣಾಜೆ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ನಂತರ ಏಳನೇ ತರಗತಿಯಿಂದ ಎಸ್.ಎಸ್.ಎಲ್.ಸಿ ವರೆಗಿನ ಶಿಕ್ಷಣವನ್ನು ಬೆಳ್ಳಾರೆ ಬೋರ್ಡ್ ಹೈಸ್ಕೂಲ್‍ನಲ್ಲಿ ಮುಗಿಸಿದರು. ಎಸ್.ಎಸ್.ಎಲ್.ಸಿ ಮುಗಿಸಿದ ಮೇಲೆ ಅವರು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪಿ.ಯು.ಸಿ ಪೂರೈಸಿದರು. ಶಿಕ್ಷಕರಾಗಬೇಕೆಂಬ ಆಸೆಯಿಂದ ನಂತರ ಉಜಿರೆಯ ಸರಕಾರಿ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ಟಿ.ಸಿ.ಎಚ್ ಡಿಪ್ಲೋಮಾ ಮಾಡಿದರು. 

ನಂತರ ತನ್ನ ಶಿಕ್ಷಕ ವೃತ್ತಿಯ ಜೊತೆ ಜೊತೆಯಲ್ಲಿ ಬಿ.ಎ ಪದವಿ ಮುಗಿಸಿ ಉಡುಪಿಯ ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದಿಂದ ಬಿ.ಎಡ್ ಪದವಿಯನ್ನು ಸಹ ಪಡೆದರು. ಅಲ್ಲದೆ ಧಾರವಾಡ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪಡೆದರು. ಹಿಂದಿಯಲ್ಲಿ ರಾಷ್ಟ್ರ ಭಾಷಾ ವಿಶಾರದಾ ಪದವಿಯನ್ನು ಸಹ ಮುಗಿಸಿದ್ದರು.

ಪಾಲ್ತಾಡಿಯವರ ವೃತ್ತಿ ಜೀವನ

ಪಾಲ್ತಾಡಿಯವರು ತನ್ನ ವೃತ್ತಿ ಜೀವನವನ್ನು 1963ರಲ್ಲಿ ಪುತ್ತೂರು ತಾಲೂಕಿನ ಕುಂತೂರು ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಕನಾಗಿ ಪ್ರಾರಂಭಿಸುತ್ತಾರೆ. ನಂತರ ಅವರು ಪುತ್ತೂರು ತಾಲೂಕಿನ ಕೆಯ್ಯೂರು, ಕಾವು, ಮಾಡ್ನೂರು, ಸಾಮೆತ್ತಡ್ಕ ಮೊದಲಾದ ಕಡೆ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಈ ಮಧ್ಯೆ  ಉಪ್ಪಿನಂಗಡಿ, ಬೊಕ್ಕಪಟ್ಟಣ, ಬೆಟ್ಟಂಪಾಡಿ ಮತ್ತು ಕಾಣಿಯೂರಿನ ಪದವಿ ಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರಾಗಿಯೂ ಸಹ ಸೇವೆ ಸಲ್ಲಿಸುತ್ತಾರೆ. ಬಳಿಕ ಸವಣೂರಿನ ವಿದ್ಯಾರಶ್ಮಿ ಶಿಕ್ಷಕ ತರಬೇತಿ ಶಿಕ್ಷಣ ಸಂಸ್ಥೆಯಲ್ಲಿ ಗೌರವ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಾರೆ.

ಪಾಲ್ತಾಡಿಯವರ ಸಾಹಿತ್ಯ ಪಯಣ 

1979ರಲ್ಲಿ ಬಾಂಗ್ಲಾ ವಿಜಯ ಎಂಬ ಯಕ್ಷಗಾನ ಪ್ರಸಂಗಕೃತಿ ಪ್ರಕಟವಾಗುವುದರೊಂದಿಗೆ ಪಾಲ್ತಾಡಿಯವರು ಲೇಖನಿಯನ್ನು ಹಿಡಿದು ಸಾಹಿತ್ಯ ಕೃಷಿಗೆ ಇಳಿಯುತ್ತಾರೆ . ಇದಕ್ಕಿಂತ ಮೊದಲೇ ಅಂದರೆ 1975ರಿಂದ 1985ರ ಅವಧಿಯಲ್ಲಿ ವಿವಿಧ ಪತ್ರಿಕೆ ಮತ್ತು  ನಿಯತಕಾಲಿಕೆಗಳಲ್ಲಿ ಇವರ ಕತೆ ಕವಿತೆಗಳು ನಿರಂತರವಾಗಿ ಪ್ರಕಟವಾಗುತ್ತಿದ್ದವು. 

ಪಾಲ್ತಾಡಿ ರಾಮಕೃಷ್ಣ ಆಚಾರ್ ರವರು ಕನ್ನಡ ಮತ್ತು ತುಳುವಿನ ಸೃಜನಾತ್ಮಕ ಬರಹಗಾರರಾಗಿ ಗುರುತಿಸಿಕೊಳ್ಳುತ್ತಾರೆ. ಕನ್ನಡ ಸಂಘ, ತುಳು ಸಂಘ, ಯಕ್ಷಗಾನ ಸಂಘ, ಸಮುದಾಯ ಸಂಘ ಇಂತಹ ಕೂಟಗಳನ್ನು ಆರಂಭಿಸಿ ತುಳು ಭಾಷೆಯ ಬೆಳವಣಿಗಾಗಿ ಬಹಳಷ್ಟು ಶ್ರಮಿಸಿದ್ದಾರೆ. ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯದಲ್ಲಿ ಆಸಕ್ತಿಯನ್ನು ಹೊಂದಿದ್ದ ಪಾಲ್ತಾಡಿಯವರು ತುಳುನಾಡಿನ ಸಂಸ್ಕೃತಿ ಮತ್ತು ಕಲೆಯ ಬಗ್ಗೆ ವಿಶೇಷ ಒಲವುಳ್ಳವರಾಗಿದ್ದು, ತುಳುನಾಡಿನ ಸಂಸ್ಕೃತಿ ಉಳಿವಿಗಾಗಿ ಹಲವು ಲೇಖನಗಳನ್ನು ಬರೆದಿದ್ದಾರೆ ಮತ್ತು ಹೋರಾಟಗಳಲ್ಲೂ ತೊಡಗಿಸಿತೊಡಗಿಸಿಕೊಳ್ಳುತ್ತಾರೆ. 

ಡಾಕ್ಟರೇಟ್ ಅಧ್ಯಯನ ಪ್ರಬಂಧಕ್ಕೆ ನಲಿಕೆ ಜನಾಂಗದ ಕುಣಿತಗಳು ಎಂಬ ಕೃತಿಯಲ್ಲಿ ಪದವಿ ಪಡೆಯುತ್ತಾರೆ. ಮಕ್ಕಳ ಕವನ ಸಂಕಲನ, ಕಥಾ ಸಂಕಲನ, ಸಂವಹನ ಮಾಧ್ಯಮವಾಗಿ ಜಾನಪದ, ಜಾನಪದ ಪರಿಸರ, ಜಾನಪದ ವೈದ್ಯ, ಜಾನಪದ ಕುಣಿತ, ದೈವಾರಾಧನೆ, ತುಳುನಾಡಿನ ಸಮಗ್ರ ಪ್ರದರ್ಶನ ಕಲೆ ಮತ್ತು ಸಾಕಷ್ಟು ಧ್ವನಿಸುರುಳಿಗಳಿಗೆ ಸಾಹಿತ್ಯವನ್ನು ಒದಗಿಸಿದ ಹಿರಿಮೆ ಇವರದ್ದು.

ಪಾಲ್ತಾಡಿಯವರು ಬರೆದ ಕೃತಿಗಳು

ಮಕ್ಕಳ ಕವನ ಸಂಕಲನ

  • ಕಿರಣ

ಕವನ ಸಂಕಲನ

  • ಮೆಲುಕಾಡಿದಾಗ
  • ಅಜಕೆ (ತುಳು)
  • ದುನಿಪು (ತುಳು)
  • ಪಚ್ಚೆಕುರಲ್ (ತುಳು)

ಕೃತಿ

  • ತುಳು ಸಂಸ್ಕತಿದ ಪೊಲಬು
  • ನಾಗ ಬೆರ್ಮೆರ್
  • ತುಳು ಕಲ್ಪುಗ
  • ಕೆದಂಬಾಡಿ ರಾಮ ಗೌಡೆರ್
  • ಅತ್ತಾವರ ಅನಂತಾಚಾರ್ಯೆ
  • ನಾಗ ಬೆರ್ಮೆ
  • ಕೆನರಾ ರೈತ ಬಂಡಾಯ
  • ತುಳುನಾಡಿನ ಪಾಣಾರರು
  • ತುಳುನಾಡಿನ ಜನಪದ ಕಥೆಗಳು
  • ವಿಶಿಷ್ಟ ತುಳುನಾಡು

ಧ್ವನಿ ಸುರುಳಿ

  • ತುಳುವ ಸಿರಿ
  • ತುಳುವ ಮಲ್ಲಿಗೆ
  • ಅರ್ತಿದ ಪೂ
  • ಶ್ರೀ ಕ್ಷೇತ್ರ ದರ್ಶನ
  • ಪ್ರಣಾಮ 

Leave a comment