ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕರಾಗಿ ಯುವ ಸಾಹಿತಿ ನಾರಾಯಣ ಕುಂಬ್ರ

ಯುವ ಜನತೆಯಲ್ಲಿ ಸಾಹಿತ್ಯಾಸಕ್ತಿ ಮೂಡಿಸುವ ಹಾಗೂ  ಯುವ ಜನತೆಯನ್ನು ಸಾಹಿತ್ಯ ಕ್ಷೇತ್ರದತ್ತ ಬರಮಾಡಿಕೊಳ್ಳುವ ನಿಟ್ಟಿನಲ್ಲಿ ಸಾಹಿತ್ಯ ಪೋಷಕರಾದ  ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ  ಮಿತ್ರಂಪಾಡಿ ಜಯರಾಮ ರೈ ಅವರ ಮಹಾ ಪೋಷಕತ್ವದಲ್ಲಿ ಪುತ್ತೂರು ತಾಲೂಕು ಕನ್ನಡ  ಸಾಹಿತ್ಯ ಪರಿಷತ್   ನಡೆಸುತ್ತಿರುವ ‘ಸಾಹಿತ್ಯದ  ನಡಿಗೆ ಗ್ರಾಮದ ಕಡೆಗೆ’ ಎಂಬ ಘೋಷ ವಾಕ್ಯದಲ್ಲಿ  ಪುತ್ತೂರು ತಾಲೂಕಿನ 32  ಗ್ರಾಮದಲ್ಲಿ  ನಡೆವ  ‘ಗ್ರಾಮ ಸಾಹಿತ್ಯ ಸಂಭ್ರಮ’  ಸರಣಿ ಕಾರ್ಯಕ್ರಮದ ಸಂಚಾಲಕರಾಗಿ ಯುವ ಸಾಹಿತಿ  ಶ್ರೀ ನಾರಾಯಣ ಕುಂಬ್ರ ಅವರು ನೇಮಕಗೊಂಡಿದ್ದಾರೆ.  

ಗ್ರಾಮ ಸಾಹಿತ್ಯ ಸಂಭ್ರಮ

2022 ನವೆಂಬರ್ ನಲ್ಲಿ ಪ್ರಾರಂಭಿಸಿದ ಈ ಸರಣಿ ಕಾರ್ಯಕ್ರಮವು ಇದೀಗ ಒಳಮೊಗ್ರು ಗ್ರಾಮದ ಕುಂಬ್ರ ದಲ್ಲಿ, ಪಾಣಾಜೆ  ಗ್ರಾಮದ ಆರ್ಲ ಪದವಿನಲ್ಲಿ ಮತ್ತು ವಡ್ಯದಲ್ಲಿ, ನೆಟ್ಟಣಿಗೆ ಮೂಡ್ನೂರು ಗ್ರಾಮದ  ಈಶ್ವರಮಂಗಲದಲ್ಲಿ, ಕಬಕ ಗ್ರಾಮದ ಮುರದಲ್ಲಿ ಐದು ಸರಣಿ ಗ್ರಾಮ ಸಾಹಿತ್ಯ ಸಂಭ್ರಮ  ಕಾರ್ಯಕ್ರಮವನ್ನು ನಾರಾಯಣ ಕುಂಬ್ರ ಅವರ ಸಂಚಾಲಕತ್ವ ದಲ್ಲಿ ಅಚ್ಚುಕಟ್ಟಾಗಿ ಜೋಡಿಸಿ ಯಶಸ್ವಿಯಾಗಿ ನೆರವೇರಿಸಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿರುವುದು ಇವರ ಕಾರ್ಯಕ್ಷಮತೆಗೆ ಹಾಗೂ ಸಂಘಟನಾ ಚತುರತೆಗೆ  ಸಾಕ್ಷಿ. ಇನ್ನೂ ಉಳಿದ ಗ್ರಾಮ ಗಳಲ್ಲಿ ಮುಂದಿನ 4 ವರ್ಷ ಪರ್ಯಂತ ನಿರಂತರವಾಗಿ ಈ ಗ್ರಾಮ ಸಾಹಿತ್ಯ ಸಂಭ್ರಮ ಇವರ ನೇತೃತ್ವದಲ್ಲಿ ನಡೆಯಲಿದೆ.

ನಾರಾಯಣ ಕುಂಬ್ರರವರು ಪ್ರಸ್ತುತ ಪುತ್ತೂರಿನ ವಿವೇಕಾನಂದ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಲ್ಯಾಬ್ ಸಹಾಯಕರಾಗಿ ಸೇವೆಯನ್ನು ಮಾಡುತ್ತಿದ್ದಾರೆ.  ವಿದ್ಯಾರ್ಥಿ ದಿಸೆಯಿಂದಲೇ  ಸಾಹಿತ್ಯ ಹಾಗೂ ಯಕ್ಷಗಾನ, ನಾಟಕ ರಂಗದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಇವರು ರಾಜ್ಯ, ಜಿಲ್ಲಾ, ಅಂತರ್ ಜಿಲ್ಲಾ ಹಾಗೂ ತಾಲೂಕು ಮಟ್ಟದ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ ಅಪಾರ ಅನುಭವ ಹೊಂದಿದವರು. ಇವರ ಅನೇಕ ಲೇಖನ ಹಾಗೂ ಕವನಗಳು ಪ್ರತಿಷ್ಠಿತ   ಪತ್ರಿಕೆಯಲ್ಲಿ ಪ್ರಕಟಗೊಂಡಿರುತ್ತದೆ. ‘ಸ್ವಪ್ನಗಳ ತೇರು’  ಎಂಬ ಕವನ ಸಂಕಲನ ರಚಿಸಿರುತ್ತಾರೆ.

ನಿಮ್ಮ ಗ್ರಾಮದಲ್ಲಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಆಯೋಜಿಸಲು ನಾರಾಯಣ ಕುಂಬ್ರ ಅವರ ಈ ದೂರವಾಣಿ ಸಂಖ್ಯೆಗೆ 8073319717 ಕರೆ ಮಾಡಬಹುದು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ತಿಳಿಸಿದ್ದಾರೆ. 

Leave a comment