ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ  – 105 ವಿದ್ಯಾರ್ಥಿಗಳಿಗೆ ಕನ್ನಡ ಪ್ರತಿಭೆ ಪ್ರಶಸ್ತಿ ಪ್ರಧಾನ

ಪುತ್ತೂರು ತಾಲೂಕಿನಿಂದ  ಹೆಚ್ಚಿನ ಸಂಖ್ಯೆಯಲ್ಲಿ ಐ.ಎ.ಎಸ್ ಅಧಿಕಾರಿಗಳಾಗಬೇಕು –  ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು: 2023-2024 ಶೈಕ್ಷಣಿಕ ವರ್ಷದಲ್ಲಿ ಕನ್ನಡವನ್ನು ಪ್ರಥಮ, ದ್ವಿತೀಯ ಹಾಗೂ ತೃತೀಯ ಭಾಷೆಯನ್ನಾಗಿ ಆಯ್ಕೆ ಮಾಡಿಕೊಂಡು ಕನ್ನಡ ವಿಷಯದಲ್ಲಿ ಶೇ.100 ಅಂಕ ಪಡೆದ ಒಟ್ಟು 105 ವಿದ್ಯಾರ್ಥಿಗಳಿಗೆ ಹಾಗೂ 10ನೇ ತರಗತಿಯಲ್ಲಿ 615ಕ್ಕಿಂತ ಹೆಚ್ಚು ಅಂಕ ಪಡೆದ 11 ವಿದ್ಯಾರ್ಥಿಗಳನ್ನು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ  ‘ಕನ್ನಡ ಪ್ರತಿಭೆ ಪ್ರಶಸ್ತಿ’ ಪುರಸ್ಕಾರ ನೀಡಿ  ಜೂ. 15ರಂದು ತೆಂಕಿಲ ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ಗೌರವಿಸಲಾಯಿತು.

ಪುತ್ತೂರು ಶಾಸಕರಾದ ಮಾನ್ಯ ಅಶೋಕ್ ಕುಮಾರ್ ರೈ ಅವರು ಮಾತನಾಡಿ ಪ್ರಯತ್ನ ಹಾಗೂ ಪರಿಶ್ರಮ ಮಾಡಿದ್ದಲ್ಲಿ ಉತ್ತಮ ಸಾಧನೆ ಮಾಡಬಹುದು ಎಂಬುದಕ್ಕೆ ಪುತ್ತೂರಿನ ಸಹಾಯಕ ಆಯುಕ್ತರಾದ ಶ್ರೀ ಜುಬಿನ್ ಮೋಹಪಾತ್ರ ಇವರು ನಮಗೆಲ್ಲ ಮಾದರಿಯಾಗಿದ್ದಾರೆ. ಇವರು ಯುಪಿಎಸ್ಸಿ ಪರೀಕ್ಷೆಯಲ್ಲಿ ಎರಡು ಬಾರಿ ತೇರ್ಗಡೆಯಾಗಿ ಐ.ಪಿ.ಎಸ್ ಅಧಿಕಾರಿಯಾಗಿ ನೇಮಕಗೊಂಡವರು. ತನ್ನ ತಾಯಿಯ ಆಸೆಯನ್ನು ಈಡೇರಿಸುವ ಸಲುವಾಗಿ ಮತ್ತೆ ಪರೀಕ್ಷೆಯನ್ನು ಬರೆದು ಐ.ಎ.ಎಸ್ ಅಧಿಕಾರಿಯಾಗಿ ಯಶಸ್ಸನ್ನು ಕಂಡವರು. ನಮ್ಮ ಟ್ರಸ್ಟ್ ಮೂಲಕ ಐಎಎಸ್ ಪರೀಕ್ಷೆಗೆ ಹಲವಾರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದ್ದೆನೆ. ಈಗಾಗಲೇ ಹೆಚ್ಚಿನ ವಿದ್ಯಾರ್ಥಿಗಳು ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಇವತ್ತು ಉತ್ತಮ ಸರಕಾರಿ ಕೆಲಸದಲ್ಲಿದ್ದಾರೆ. ವಿದ್ಯಾರ್ಥಿಗಳು ಛಲದಿಂದ ಪ್ರಯತ್ನ ಪಟ್ಟಾಗ ಉತ್ತಮ ಐಎಎಸ್ ಅಧಿಕಾರಿಗಳಾಗಿ ಅಥವಾ ಇತರ ಸಾಧನೆಗಳನ್ನು ಮಾಡಬಹುದು ಎಂದು ಶುಭ ಹಾರೈಸಿದರು.

ಈ ಕಾರ್ಯಕ್ರಮನ್ನು ಉದ್ಘಾಟಿಸಿದ ಪುತ್ತೂರಿನ ಸಹಾಯಕ ಆಯುಕ್ತರಾದ ಶ್ರೀ ಜುಬಿನ್ ಮೊಹಪಾತ್ರ ಅವರು ಮಾತನಾಡಿ ವಿದ್ಯಾರ್ಥಿಗಳು ಸದಾ ಸ್ಪೂರ್ತಿಯಿಂದ ಇರಬೇಕು.  ಐಎಎಸ್, ಐಪಿಎಸ್ ಪರೀಕ್ಷೆ ದೇಶದಲ್ಲೇ ಅತ್ಯಂತ ಕಠಿಣವಾದ ಪರೀಕ್ಷೆಯಾಗಿದೆ. ವಿದ್ಯಾರ್ಥಿಗಳಲ್ಲಿ ಗುರಿ ಇರಲಿ. ಈ ಪರೀಕ್ಷೆಯಲ್ಲಿ ತೇರ್ಗಡೆ ಆಗದಿದ್ದರೂ ಇತರ ಅವಕಾಶಗಳು ತುಂಬಾ ಇದೆ. ಕೆಲವೊಮ್ಮೆ ಶ್ರಮ ಪಟ್ಟರೂ ಅಪೇಕ್ಷೆಗೆ ತಕ್ಕಂತೆ ಫಲಿತಾಂಶ ಬರುವುದಿಲ್ಲ. ಅದಕ್ಕೆ ಆತ್ಮಹತ್ಯೆ ಪರಿಹಾರವಲ್ಲ. ಆತ್ಮವಿಶ್ವಾಸ ಮುಖ್ಯ, ಮಾತೃ ಭಾಷೆಗೆ ಪ್ರಾಮುಖ್ಯತೆ ಕೊಡಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಲೋಕೇಶ್ ಎಸ್.ಆರ್ ಅವರು ಮಾತನಾಡಿ ಸಾಧನೆಗೆ ತಾಳ್ಮೆ ಮುಖ್ಯ, ತಾಳ್ಮೆ ಇದ್ದಾಗ ಗುರಿ ಸಾಧಿಸಬಹುದು. ಕಷ್ಟಪಟ್ಟು ಓದಿ ಜೀವನದಲ್ಲಿ ಎನಾದರೂ ಒಂದು ಸಾಧನೆ ಮಾಡಿ. ಪುಸ್ತಕಗಳನ್ನು ಸದಾ ಪ್ರೀತಿಸಿ ಎಂದು ಮಾತನಾಡಿ  ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಅವರು ಮಾತನಾಡಿ ಕನ್ನಡದ ಸೇವೆಗಾಗಿ ಸಾಹಿತ್ಯ ಪರಿಷತ್‌ನಿಂದ ಹಲವಾರು ಕಾರ್ಯಕ್ರಮ ನಿರಂತರ ನಡೆಯುತ್ತಿದ್ದು, ಯುವ ಜನತೆಗೆ ಹಾಗೂ ಸಾರ್ವಜನಿಕರಿಗೆ  ಸಾಹಿತ್ಯ ಪರಿಷತ್ತು ಸನಿಹವಾಗುತ್ತಿದೆ ಪರಸ್ಪರ ಆತ್ಮೀಯತೆ ಬೆಸೆಯುತ್ತಿದೆ ಎಂದು ಶುಭ ಹಾರೈಸಿದರು.

ಕನ್ನಡ ಸಾಹಿತ್ಯ ಪರಿಷತ್ ನ ನಿಕಟಪೂರ್ವ ಅಧ್ಯಕ್ಷ ಬಿ ಐತ್ತಪ್ಪ ನಾಯ್ಕ್, ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಹಿಂದೆ ಸಾಹಿತಿಗಳು ತಾವು ಕ್ರೋಡಿಕರಿಸಿದ ಹಣದಲ್ಲಿ ಸಾಹಿತ್ಯ ಸಂಭ್ರಮ ಮಾಡುತ್ತಿದ್ದರು. ಆಗ ಪ್ರಯಾಣ ವೆಚ್ಚ, ಗೌರವ ಧನ ಇರಲಿಲ್ಲ. ಎಲ್ಲರು ನೆಲದ ಮೇಲೆ ಚಾಪೆ ಹಾಕಿ ಮೂರು ದಿನ ಕನ್ನಡ ಸಾಹಿತ್ಯ ಸಮ್ಮೇಳವನ್ನು ಯಶಸ್ವಿಗೊಳಿಸಿದ ದಿನವೂ ಇದೆ. ಇದರ ಮಧ್ಯೆ ಇವತ್ತು ಕನ್ನಡ ಹೆಮ್ಮರವಾಗಿ ಬೆಳೆದಿದೆ. ಕನ್ನಡ ಸಾಹಿತ್ಯಕ್ಕಾಗಿ ಪ್ರತಿ ತಿಂಗಳು ಗ್ರಾಮದಲ್ಲಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಯುತ್ತಿದೆ. ಸರಕಾರದ ಅನುದಾನ ಇಲ್ಲದಿದ್ದರೂ ಕಳೆದ ಎರಡು ವರ್ಷಗಳಲ್ಲಿ ಸುಮಾರು 175ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಮಾಡಿದ ಸಾರ್ಥಕ್ಯ ಸಾಹಿತ್ಯ ಪರಿಷತ್ತಿಗೆ ಸಲ್ಲುತ್ತದೆ ಎಂದರು.

ವಿದ್ಯಾರ್ಥಿಗಳಿಗೆ ಕನ್ನಡದಲ್ಲೂ ಐಎಎಸ್ ಹಾಗೂ ಐಪಿಎಸ್ ತತ್ಸಮಾನ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬಹುದೆಂಬ ವಿಚಾರದ ಕಾರ್ಯಗಾರವನ್ನು ಡಾ. ಮೈತ್ರಿ ಭಟ್ ಅವರು ಪರಿಣಾಮಕಾರಿಯಾಗಿ ನಡೆಸಿಕೊಟ್ಟರು.

ಸಾಧಕ ವಿದ್ಯಾರ್ಥಿಗಳಿಗೆ ‘ಕನ್ನಡ ಪ್ರತಿಭೆ ಪ್ರಶಸ್ತಿ’

ಕನ್ನಡ ಎಮ್.ಎ ಯಲ್ಲಿ ಪ್ರಥಮ ರ್‍ಯಾಂಕ್ ಗಳಿಸಿದ ಸೌಜನ್ಯ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಕನ್ನಡದಲ್ಲಿ ಶೇ.100 ಅಂಕ ಪಡೆದ 19 ಹುಡುಗರು, 87 ಹುಡುಗಿಯರು ಸೇರಿದಂತೆ ತಾಲೂಕಿನ 21 ಶಾಲೆಯ ಒಟ್ಟು 105 ವಿದ್ಯಾರ್ಥಿಗಳಿಗೆ ಹಾಗೂ 10ನೇ ತರಗತಿಯಲ್ಲಿ 615ರ ಮೇಲ್ಪಟ್ಟು ಅಂಕ ಪಡೆದ 11 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಆಶಾ ಬೆಳ್ಳಾರೆ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು. 

ನಿವೃತ್ತ ಮುಖ್ಯಗುರುಗಳಾದ ನಾರಾಯಣ ರೈ ಕುಕ್ಕುವಳ್ಳಿ, ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಕಾಂತ್ ಕೊಳತ್ತಾಯ, ಉಪನ್ಯಾಸಕರಾದ ಕಾರ್ತಿಕ್ ಕುಮಾರ್, ಮಧುರ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾದ್ಯಾಯಿನಿ ಆಶಾ ಬೆಳ್ಳಾರೆ, ಉಪನ್ಯಾಸಕಿ ನಾಗಶ್ರೀ ಅವರು ಅತಿಥಿಗಳಿಗೆ ಪುಸ್ತಕ ಹಾಗೂ ಕನ್ನಡ ಶಾಲನ್ನು  ಸಮರ್ಪಿಸಿದರು. ನರೇಂದ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶಾನ್ ಬೋಗ್ ಸ್ವಾಗತಿಸಿದರು. ನರೇಂದ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.ಅಗಮ್ಯ ಅವರು ದೇವರನ್ನು ಸ್ತುತಿಸಿದರು. ರೇಣುಕಾ ಮತ್ತು ಶಶಿಕಲಾ ಕಾರ್ಯಕ್ರಮ ನಿರೂಪಿಸಿದರು. ಪ್ರಿಯಾ ಮೆಡಿಕಲ್ ಮಾಲಕರಾದ ಚಂದ್ರನ್ ಹಾಗೂ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಗೋಪಾಲಕೃಷ್ಣ ಅವರು ವೇದಿಕೆಯಲ್ಲಿ ಉಪಸಿತರಿದ್ದರು.

KASAPA Kannada Pratibhe Prashasthi
KASAPA Kannada Pratibhe Prashasthi

Leave a comment